ಬೆಂಗಳೂರು: ಹಿಜಬ್ ಬಗ್ಗೆ ನಿನ್ನೆ ನಾನು ಪ್ರಸ್ತಾಪವನ್ನೇ ಮಾಡಿಲ್ಲ. ಹೀಗಿದ್ದಾಗ ಹಿಜಬ್ಗೂ ಮತ್ತು ಸ್ವಾಮೀಜಿಗಳ ಬಟ್ಟೆಗೂ ಹೋಲಿಕೆ ಮಾಡಲಾಗಿದೆ ಎಂಬಂಶ ಎಲ್ಲಿಂದ ಬರುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಮೇಲೆ ನನಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಅವರಿಗೆ ಅಗೌರವ ತೋರುವಂತೆ ಈ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ಹೆಣ್ಣು ಮಕ್ಕಳು ಧರಿಸುವ ದುಪಟ್ಟ ಬಗ್ಗೆ ಮಾತನಾಡಿದ್ದೆ, ಹಿಜಬ್ಗೂ ದುಪಟ್ಟಗೂ ಭಾರಿ ವ್ಯತ್ಯಾಸವಿದೆ ಎಂದರು.ನಾನು ಸದನದಲ್ಲಿ ಮಾತನಾಡುವಾಗ ತರಗತಿ ಒಳಗೆ ಹಿಜಬ್ ಧರಿಸದಂತೆ ನ್ಯಾಯಾಲಯದ ಆದೇಶ ಇದೆ. ಹಾಗಾಗಿ ಸರ್ಕಾರ ಶಾಲಾ ಸಮವಸ್ತ್ರದ ಬಣ್ಣದ ದುಪಟ್ಟ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಸಚಿವರಾದ ಅಶ್ವತ್ಥ ನಾರಾಯಣ ಮತ್ತು ನಾಗೇಶ್ ಅವರಿಗೆ ಸಲಹೆ ನೀಡಿದ್ದೆ. ಇದನ್ನು ಸ್ವೀಕರಿಸೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬ ಕಾರಣಕ್ಕೆ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಾವು ಸಮವಸ್ತ್ರಕ್ಕೆ ವಿರುದ್ಧವಾಗಿಲ್ಲ, ಸಮವಸ್ತ್ರವನ್ನು ಧರಿಸಲಿ, ಅದರ ಜೊತೆಗೆ ಸಮವಸ್ತ್ರದ ಬಣ್ಣದ ದುಪಟ್ಟವನ್ನು ಧರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದೆ. ಮಕ್ಕಳಿಗೆ ಶಿಕ್ಷಣ ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ, ಒಂದು ವೇಳೆ ಪರೀಕ್ಷೆಗೆ ಹಾಜರಾಗದೆ ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅದಕ್ಕೂ ಸರ್ಕಾರವೇ ಜವಾಬ್ದಾರಿಯಾಗುತ್ತದೆ. ಸಲಹೆ ನೀಡುವುದು ವಿರೋಧ ಪಕ್ಷವಾದ ನಮ್ಮ ಕರ್ತವ್ಯ. ಅದನ್ನು ಸ್ವೀಕರಿಸದಿದ್ದರೆ ನಾವೇನು ಮಾಡೋದು ಎಂದು ಹೇಳಿದರು.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ