ಉಡುಪಿ

ಉಡುಪಿ, udupi

ಮಂಗಳೂರು

ಮಂಗಳೂರು, mangaluru, mangalore

ರಾಜ್ಯ

ರಾಜ್ಯ

Breaking

Videos

ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ: 'ಮಾಸ್ಕ್ ಮ್ಯಾನ್' ಚಿನ್ನಯ್ಯ ಅರೆಸ್ಟ್

 


ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, `ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗಾಗಿ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಯಿಂದ ತಾಲ್ಲೂಕು ಆಸ್ಪತ್ರೆಗೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕರೆದೊಯ್ದು, ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಸುಮಾರು 19 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆತ ಹಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಚಿನ್ನಯ್ಯ ಹೆಸರಿಸಿರುವ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆಸುವ ಸಾಧ್ಯತೆ ಇದೆ.

ಆರೋಪಿ ಚಿನ್ನಯ್ಯ, ತಾನು 2014ರ ನಂತರ ತಮಿಳುನಾಡಿನಲ್ಲಿದ್ದೆ ಮತ್ತು 2023ರಲ್ಲಿ ಮೂವರ ಗುಂಪೊಂದು ತನ್ನನ್ನು ಇಲ್ಲಿಗೆ ಕರೆತಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿತ್ತು ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಈ ಮೊದಲು, ತಾನು ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಸಂಚಲನ ಮೂಡಿಸಿದ್ದ. ಆದರೆ ಈಗ ತನ್ನ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾನೆ. ಆದರೂ, ಆತ ಕಳೆದೊಂದು ತಿಂಗಳಿನಿಂದ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಓಡಾಡಿದ್ದ. ಸದ್ಯ, ಆತನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ

ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ, ವೈದ್ಯಕೀಯ ಪ್ರಮಾಣಪತ್ರ ಪಡೆದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ಚಿನ್ನಯ್ಯನನ್ನು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಹೆಚ್ಚಿದೆ.

ಧರ್ಮಸ್ಥಳಕ್ಕೆ ನರಮಂಡಲ ತರಲು ಹೇಳಿದ ಮೂವರ ಹೆಸರನ್ನು `ಮಾಸ್ಕ್ ಮ್ಯಾನ್' ಚಿನ್ನಯ್ಯ ಬಹಿರಂಗಪಡಿಸಿದ್ದು, ಪೊಲೀಸರು ಮತ್ತು ಎಸ್ಐಟಿ ತಂಡ ಈ ಕುರಿತು ಆಳವಾದ ತನಿಖೆ ನಡೆಸಲಿದೆ. ನೂರಾರು ಶವಗಳಲ್ಲಿ ಶೇಕಡಾ 90ರಷ್ಟು ಮಹಿಳೆಯರು, ಯುವತಿಯರು ಮತ್ತು ಬಾಲಕಿಯರ ಶವಗಳಿದ್ದವು, ಮತ್ತು 15 ವರ್ಷದ ಬಾಲಕಿಯೊಬ್ಬಳ ದೇಹದಲ್ಲಿ ಲೈಂಗಿಕ ದೌರ್ಜನ್ಯದ ಗಾಯಗಳಿದ್ದವು ಎಂದು ಈ ಹಿಂದೆ ಚಿನ್ನಯ್ಯ ಹೇಳಿಕೆ ನೀಡಿದ್ದ. ಈಗ ಆತನ ಬಂಧನವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಉಡುಪಿ: ಕಾರು ಅಪಘಾತ; ಖ್ಯಾತ ಡಿಜೆ ಮರ್ವಿನ್ ಸಾವು


ಉಡುಪಿ: ನಾಯಿಯೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಪರಿಣಾಮ ಖ್ಯಾತ ಡಿಜೆ ಮರ್ವಿನ್ ಮೆಂಡೋನ್ಸಾ (29) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ಇಂದು ಮುಂಜಾನೆ ಕಾಪು ತಾಲೂಕಿನ ಮೂಳೂರು ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಮರ್ವಿನ್ ಅವರ ಸ್ನೇಹಿತರಾದ ಪ್ರಜ್ವಲ್ ಮತ್ತು ಪ್ರಸಾದ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ನೆರವಿನೊಂದಿಗೆ ಉಚ್ಚಿಲ ಆಂಬ್ಯುಲೆನ್ಸ್‌ನ ಜಲಾಲುದ್ದೀನ್, ಹಮೀದ್, ಕೆ.ಎಂ. ಸಿರಾಜ್ ಮತ್ತು ಅನ್ವರ್ ಕೋಟೇಶ್ವರ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಮೂಲಗಳ ಪ್ರಕಾರ, ಮುಂಜಾನೆ ಮೂಳೂರು ಮಾರ್ಗವಾಗಿ ಬರುತ್ತಿದ್ದ ಕಾರು, ನಾಯಿಯೊಂದು ಅಡ್ಡಬಂದಾಗ ಅದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮರ್ವಿನ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.

ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಸಿದ್ಧ ಡಿಜೆಯಾಗಿ ಗುರುತಿಸಿಕೊಂಡಿದ್ದ ಮರ್ವಿನ್, ಹಲವಾರು ಕೊಂಕಣಿ ಸಂಗೀತ ವೀಡಿಯೊಗಳನ್ನು ನಿರ್ದೇಶಿಸಿದ್ದರು. ನಿನ್ನೆಯಷ್ಟೇ ಅವರ ಹೊಸ ಕೊಂಕಣಿ ಮ್ಯೂಸಿಕ್ ವಿಡಿಯೊ ಬಿಡುಗಡೆಯಾಗಿತ್ತು. ಅವರ ಅಕಾಲಿಕ ಮರಣಕ್ಕೆ ಸಂಗೀತ ಲೋಕ ಮತ್ತು ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ವ್ಯಕ್ತವಾಗಿದೆ.

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾ

ರೆ.

ಬಾಳ್ಕುದ್ರೂ: ಸರ್ವೋದಯ ಯುವಕ ಮಂಡಲದ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ :

 


ಬಾಳ್ಕುದ್ರು : ಸರ್ವೋದಯ ಯುವಕ ಮಂಡಲದ ವಠಾರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಚಕ್ರವರ್ತಿ ಬಾರ್ ಹಂಗಾರಕಟ್ಟೆಯ ಮಾಲೀಕರಾದ ಹರ್ಷೇಂದ್ರ ಶೆಟ್ಟಿಯವರು ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀಯುತ ವಿಜೇತ್ ದೇವಾಡಿಗ, ಮಹಿಳಾ ಮಂಡಳದ ಅಧ್ಯಕ್ಷೆಯಾದ ಶ್ರೀಮತಿ ರೇಖಾ ಪಿ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ವಿಜಯ್ ಪೂಜಾರಿ ಹಾಗೂ ಊರಿನ ಹಿರಿಯರಾದ ಶ್ರೀಮತಿ ಅನುಸೂಯಾ ಟೀಚರ್ ಉಪಸ್ಥಿತರಿದ್ದರು.

ನಂತರ ಸ್ವಾತಂತ್ರ್ಯ ದಿನಾಚರಣೆಯ ಹಂಗಾರಕಟ್ಟೆ ಅಂಗನವಾಡಿಗೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರು ವಿದ್ಯಾರ್ಥಿಗಳಿಗೆ ಸರ್ವೋದಯ ಯುವಕ ಮಂಡಲದ ವತಿಯಿಂದ ಸಿಹಿಯನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಕಾರ್ತಿಕ್ ಹಂಗಾರಕಟ್ಟೆ ಅವರು ನಿರೂಪಿಸಿ ರಾಮ ದಂಡಬೆಟ್ಟುರವರು ವಂದಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ರದ್ದು; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಸಭಾಧ್ಯಕ್ಷರಿಗೆ ಮನವಿ ಮಾಡಲಾಗಿದೆ : ಶಾಸಕ ಸುನೀಲ್ ಕುಮಾರ್


 ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ವರ್ಷದ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಜಿಪಿಆರ್ ಮೂಲಕ ಅಸ್ತಿಪಂಜರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.ಅಲ್ಲದೆ ಈ ಒಂದು ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಎಂಟ್ರಿ ಕೊಟ್ಟಿದ್ದು, ಎಸ್‌ಐಟಿ ಅಧಿಕಾರಿಗಳಿಂದ ಹಾಗೂ ಪೊಲೀಸರಿಂದ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ.

ಅಲ್ಲದೆ ಸುಮೋಟೋ ಕೇಸ್ ಕೂಡ ದಾಖಲಿಸಿಕೊಂಡಿದೆ.ಈ ವಿಚಾರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಲು ಸದನದಲ್ಲಿ ಪ್ರಸ್ತಾಪ ಮಾಡಲು ಸ್ಪೀಕರ್ಗೆ ಅವಕಾಶ ಕೇಳಿದ್ದೇವೆ. ಧರ್ಮಸ್ಥಳ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ಕೊಡುತ್ತೇವೆ ಇಂದು ಸಭಾಧ್ಯಕ್ಷರು ಹೇಳಿದ್ದಾರೆ ಇವತ್ತು ಅವಕಾಶ ಕೊಟ್ಟರೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಬೆಂಗಳೂರಲ್ಲಿ ಸುನೀಲ್ ಕುಮಾರ್ ತಿಳಿಸಿದರು.

ಮಣಿಪಾಲ: ಅಜಾಗರೂಕತೆಯಿಂದ ಕಾರು ಚಲಾಯಿಸಿದ ಯುವಕನ ಬಂಧನ

 


ಮಣಿಪಾಲ: ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿದ್ದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಶೋಹೈಲ್ ನೀಲಾಕತ್ (26) ಬಂಧಿತ ಆರೋಪಿ.

ಕಳೆದ ಆಗಸ್ಟ್ 11, 2025ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀಲಿ ಬಣ್ಣದ ಕಾರನ್ನು ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಉಡುಪಿಯಿಂದ ಹಿರಿಯಡ್ಕದ ಕಡೆಗೆ ಅತಿ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ. ಇದರಿಂದ ರಸ್ತೆಯಲ್ಲಿದ್ದ ದ್ವಿಚಕ್ರ ವಾಹನಗಳು ಮತ್ತು ಇತರ ವಾಹನಗಳಿಗೆ ಅಪಘಾತ ಸಂಭವಿಸುವ ಅಪಾಯವಿತ್ತು. ಅಲ್ಲದೆ, ಕಾರು ವಿಪರೀತ ಕರ್ಕಶ ಶಬ್ದ ಮಾಡುತ್ತಿತ್ತು.

ಈ ವರ್ತನೆಯಿಂದ ಅನುಮಾನಗೊಂಡ ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ ವಿವೇಕಾನಂದ ಬಿ. ಅವರು ತಮ್ಮ ಸಿಬ್ಬಂದಿಯೊಂದಿಗೆ ಕಾರನ್ನು ಹಿಂಬಾಲಿಸಿದರು. ಕೊನೆಗೆ, ಎಂಐಟಿ ಜಂಕ್ಷನ್ ಬಳಿ ಕಾರನ್ನು ತಡೆದು ವಶಕ್ಕೆ ಪಡೆದರು. ಕಾರಿನ ಚಾಲಕ ಶೋಹೈಲ್ ನೀಲಾಕತ್‌ನನ್ನು ಬಂಧಿಸಲಾಯಿತು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2025ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125, 292 ಮತ್ತು ಮೋಟಾರು ವಾಹನ ಕಾಯ್ದೆ (IMV Act) ನಿಯಮಗಳ ಪ್ರಕಾರ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಬಾಳ್ಕುದ್ರು : 50 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಚೌತಿ ಗಮ್ಮತ್ 2025

 


ಬಾಳ್ಕುದ್ರು : 50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಚೌತಿ ಗಮ್ಮತ್ 2025 ಸ.ಹಿ.ಪ್ರಾ.ಶಾಲೆ. ಬಾಳ್ಕುದ್ರುವಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಚೌತಿ ಗಮ್ಮತ್ ಕ್ರೀಡಾಕೂಟವನ್ನು ದೀಪವನ್ನು ಪ್ರಜ್ವಲಿಸುವ ಮೂಲಕ ಶಾಲೆಯ ನೀವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಇವರು ಉದ್ಘಾಟಿಸಿ ಮಾತನಾಡಿದರು. 

ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಮತಿ ಶಶಿಕಲಾ ಹಾಗೂ ಶ್ರೀಮತಿ ದೇವಕಿ ರಂಗ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.

ನಂತರ ಶಾಲೆಯ ಮೈದಾನದಲ್ಲಿ ವಿಕೇಟ್ ಗೆ ಗುರಿ ಇಡುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. 



ಈ ಸಂದರ್ಭದಲ್ಲಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಹಾಗೂ ದೇವಕಿ ರಂಗ ಮಾಸ್ಟರ್ , ಐರೋಡಿ ಗ್ರಾಮಪಂಚಾಯತ್ ನ ಸದಸ್ಯರಾದ ಶ್ರೀಯುತ ಸುಬ್ರಹ್ಮಣ್ಯ ಆಚಾರ್ಯ, ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ವಿಜಯ್ ಪೂಜಾರಿ, 50 ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಯುತ ನಾಗರಾಜ ದೇವಾಡಿಗ , ಸರ್ವೋದಯ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಯುತ ವಿಜೇತ ದೇವಾಡಿಗ ಹಾಗೂ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಖಾ ಪಿ ಸುವರ್ಣ ಹಾಗೂ ಉಭಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಚೌತಿ ಗಮ್ಮತ್ ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಶ್ರೀಕಾಂತ್ ಸಾಮಂತ್ ಅವರು ನಿರೂಪಿಸಿ ವಂದಿಸಿದರು.

ಆಗಸ್ಟ್ 5 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಕೆ: ಹವಾಮಾನ ಇಲಾಖೆ ಮುನ್ಸೂಚನೆ


ಬೆಂಗಳೂರು: ರಾಜ್ಯದಲ್ಲಿ ಭಾನುವಾರದಿಂದ ಆರಂಭವಾಗಿರುವ ಮಳೆಯು ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 5 ರಿಂದ ಆಗಸ್ಟ್ 7 ರ ವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದ್ದು, ಆದ್ದರಿಂದ ಆಗಸ್ಟ್ 4 ರಿಂದ 7 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಯಾವ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್?

 * ಆಗಸ್ಟ್ 5 ರಂದು: ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು, ಮತ್ತು ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

 * ಆಗಸ್ಟ್ 6 ಮತ್ತು 7 ರಂದು: ಕರಾವಳಿಯ ಮೂರು ಜಿಲ್ಲೆಗಳ ಜೊತೆಗೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಈ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಮಳೆಯಾಗಲಿದೆ. ಅದೇ ರೀತಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಡಿಯಾಳಿ ದೇಗುಲದಲ್ಲಿ ಕಳ್ಳತನ ಯತ್ನ: ದೇವಿಯೇ ಕಳ್ಳನಿಗೆ ಶಿಕ್ಷೆ ನೀಡಿದಳೆಂದ ಭಕ್ತರು!

 


ಉಡುಪಿ, ಜುಲೈ 26: ನಗರದ ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ನಡೆದ ಕಳ್ಳತನದ ಯತ್ನವು ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ವಿಫಲಗೊಂಡಿದೆ. ಕಳ್ಳತನಕ್ಕೆಂದು ಬಂದ ಇಬ್ಬರು ಕೇರಳ ಮೂಲದ ಆರೋಪಿಗಳ ಪೈಕಿ ಒಬ್ಬ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದರೆ, ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೇವಿಯ ಮಹಾತ್ಮೆಯಿಂದಲೇ ಕಳ್ಳನಿಗೆ ಮೂರ್ಛೆರೋಗ ಬಂದಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಘಟನೆಯ ವಿವರ:

ಶುಕ್ರವಾರ ತಡರಾತ್ರಿ ಸುಮಾರು ೩ ಗಂಟೆಯ ಸಮಯದಲ್ಲಿ ಇಬ್ಬರು ಕಳ್ಳರು ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿಯಲು ಪ್ರಯತ್ನಿಸುತ್ತಿದ್ದರು. ಈ ಶಬ್ದವನ್ನು ಕೇಳಿದ ದೇವಸ್ಥಾನದ ಕಾವಲುಗಾರ ತಕ್ಷಣ ಎಚ್ಚೆತ್ತುಕೊಂಡು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಕಳ್ಳರು, ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಆದರೆ, ಧೃತಿಗೆಡದ ಕಾವಲುಗಾರ ತಕ್ಷಣವೇ ಸ್ಥಳೀಯ ಭಕ್ತರಿಗೆ ಮೊಬೈಲ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿದು ಕೆಲವೇ ನಿಮಿಷಗಳಲ್ಲಿ ದೇವಸ್ಥಾನದ ಆವರಣದಲ್ಲಿ ನೂರಾರು ಸ್ಥಳೀಯರು ಜಮಾಯಿಸಿದ್ದಾರೆ. ತಕ್ಷಣವೇ ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ಕಳ್ಳರು ಬಂದಿರುವುದು ಮತ್ತು ಅವರು ಪರಾರಿಯಾದ ದಾರಿ ಸ್ಪಷ್ಟವಾಗಿದೆ.

ಸಾರ್ವಜನಿಕರಿಂದಲೇ ಕಳ್ಳರ ಸೆರೆ:

ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಸ್ಥಳೀಯ ಯುವಕರು ಮತ್ತು ಭಕ್ತರು ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ ಬೆನ್ನಟ್ಟಿದ್ದಾರೆ. ಜನರನ್ನು ಕಂಡೊಡನೆ ಕಳ್ಳರು ಓಡಲಾರಂಭಿಸಿದ್ದಾರೆ.

ಈ ಸಂದರ್ಭದಲ್ಲಿ, ಓಡುತ್ತಿದ್ದ ಕಳ್ಳರಲ್ಲೊಬ್ಬನಿಗೆ ದಿಢೀರ್ ಎಂದು ಮೂರ್ಛೆರೋಗ ಕಾಣಿಸಿಕೊಂಡು ಆತ ನೆಲಕ್ಕುರುಳಿದ್ದಾನೆ. ಅವನನ್ನು ಉಪಚರಿಸುತ್ತಿದ್ದ ಮತ್ತೊಬ್ಬ ಕಳ್ಳನನ್ನು ಸ್ಥಳೀಯರು ಸುತ್ತುವರಿದು ಹಿಡಿದಿದ್ದಾರೆ.

ಕಳ್ಳನಿಗೆ ಸ್ಥಳೀಯರಿಂದಲೇ ಪ್ರಥಮ ಚಿಕಿತ್ಸೆ:

ಮೂರ್ಛೆ ರೋಗದಿಂದ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನ ಸ್ಥಿತಿ ಕಂಡು ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ. ಕಳ್ಳತನಕ್ಕೆಂದು ಅವರು ತಂದಿದ್ದ ಕಬ್ಬಿಣದ ಸಲಕರಣೆಗಳನ್ನೇ ಆತನ ಕೈಗೆ ನೀಡಿ, ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಜ್ಞೆ ಬರಿಸಲು ಪ್ರಯತ್ನಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಸ್ಥಳೀಯರ ನೆರವಿನಿಂದ ಮೂರ್ಛೆ ಹೋದ ಕಳ್ಳನನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಬ್ಬ ಕಳ್ಳನನ್ನು ಉಡುಪಿ ನಗರ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ.

ಭಕ್ತರ ಮಾತು ಮತ್ತು ಶ್ಲಾಘನೆ:

"ಕಳ್ಳತನ ಮಾಡಲು ಬಂದ ದುಷ್ಕರ್ಮಿಗೆ ಕಡಿಯಾಳಿಯ ದೇವಿಯೇ ತಕ್ಕ ಶಿಕ್ಷೆ ನೀಡಿದ್ದಾಳೆ. ದೇವಿಯ ಸನ್ನಿಧಾನದಲ್ಲಿ ಕೆಟ್ಟ ಕೆಲಸ ಮಾಡಲು ಬಂದರೆ ಇಂಥದ್ದೇ ಗತಿಯಾಗುತ್ತದೆ" ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಧೈರ್ಯದಿಂದ ಕಳ್ಳರನ್ನು ಎದುರಿಸಿ, ಸಮಯಪ್ರಜ್ಞೆಯಿಂದ ಮಾಹಿತಿ ನೀಡಿದ ದೇವಸ್ಥಾನದ ಕಾವಲುಗಾರನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿತ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಮತ್ತೊಬ್ಬ ಆರೋಪಿಯ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಈ ಕೃತ್ಯದಲ್ಲಿ আরও ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


ಉಡುಪಿ: ನಕಲಿ ನಂಬರ್ ಪ್ಲೇಟ್ ಹಾಕಿ ಸಂಚರಿಸುತ್ತಿದ್ದ ಬಸ್ ವಶಕ್ಕೆ: ಆರ್.ಟಿ.ಓ. ಅಧಿಕಾರಿಗಳಿಂದ ಕಾರ್ಯಾಚರಣೆ


ಉಡುಪಿ: ನಕಲಿ ನೋಂದಣಿ ಫಲಕವನ್ನು ಅಳವಡಿಸಿಕೊಂಡು ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದನ್ನು ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ.) ಅಧಿಕಾರಿಗಳು , ವಶಕ್ಕೆ ಪಡೆದ ಘಟನೆ ನಡೆದಿದೆ.

ಸೂರಜ್ ಎಂಬುವವರ ಮಾಲಕತ್ವದ, ಕೆ. ಉಮೇಶ್ ಚಾಲಕರಾಗಿ ಹಾಗೂ ರಾಜೇಂದ್ರ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ 'ಅಂಬಿಕಾ' ಹೆಸರಿನ ಬಸ್ (KA20AB4242) ಇದಾಗಿದ್ದು, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯ ವಿವರ:

ಉಡುಪಿಯಿಂದ ಕುಂದಾಪುರದ ಕಡೆಗೆ ತೆರಳುತ್ತಿದ್ದ 'ಅಂಬಿಕಾ' ಬಸ್ ಮೇಲೆ ಸಂಶಯಗೊಂಡ ಆರ್.ಟಿ.ಓ. ಅಧಿಕಾರಿಗಳು, ಅದನ್ನು ಮಾರ್ಗಮಧ್ಯೆ ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಬಸ್ಸಿಗೆ ಅಳವಡಿಸಲಾಗಿದ್ದ ನೋಂದಣಿ ಫಲಕ (KA20AB4242) ಮತ್ತು ವಾಹನದ ಎಂಜಿನ್ ಹಾಗೂ ಚಾಸಿಸ್ ಸಂಖ್ಯೆಗಳ ನಡುವೆ ಭಾರೀ ವ್ಯತ್ಯಾಸ ಇರುವುದು ಬೆಳಕಿಗೆ ಬಂದಿದೆ.

ಪರಿಶೀಲನೆ ಮುಂದುವರಿಸಿದಾಗ, ಬಸ್ಸಿನ ಸಂಖ್ಯೆ (Chassis Number) MAT751120KFJ13668 ಮತ್ತು (Engine Number) 497TC41JPY829428 ಆಗಿರುವುದು ಪತ್ತೆಯಾಗಿದೆ. ಈ ಸಂಖ್ಯೆಗಳು ವಾಸ್ತವವಾಗಿ KA20AA8756 ನೋಂದಣಿ ಸಂಖ್ಯೆಯ ವಾಹನಕ್ಕೆ ಸೇರಿದ್ದಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಮೂಲಕ, ಬಸ್ಸಿಗೆ ಸಂಪೂರ್ಣ ಸುಳ್ಳು ನೋಂದಣಿ ಫಲಕವನ್ನು ಪ್ರದರ್ಶಿಸಿ, ಕಾನೂನುಬಾಹಿರವಾಗಿ ಸಂಚಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ.

ದಾಖಲೆಗಳಿಲ್ಲದೆ ಚಾಲನೆ:

ತಪಾಸಣೆಯ ವೇಳೆ, ಚಾಲಕ ಕೆ. ಉಮೇಶ್ ಅವರ ಬಳಿ ವಾಹನದ ಯಾವುದೇ ಅಧಿಕೃತ ದಾಖಲಾತಿಗಳು ಲಭ್ಯವಿರಲಿಲ್ಲ. ಅಷ್ಟೇ ಅಲ್ಲದೆ, ತಮ್ಮ ಚಾಲನಾ ಪರವಾನಿಗೆಯನ್ನು (Driving License) ಹಾಜರುಪಡಿಸಲೂ ಅವರು ವಿಫಲರಾಗಿದ್ದಾರೆ.

ಈ ಎಲ್ಲಾ ಗಂಭೀರ ಲೋಪಗಳನ್ನು ಪರಿಗಣಿಸಿ, ಆರ್.ಟಿ.ಓ. ಅಧಿಕಾರಿಗಳು ತಕ್ಷಣವೇ 'ಅಂಬಿಕಾ' ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಆರ್.ಟಿ.ಓ. ಇನ್ಸ್‌ಪೆಕ್ಟರ್ ಸಂತೋಷ್ ಶೆಟ್ಟಿ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು  ತನಿಖೆ ನಡೆಸುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿದ್ದರ ಹಿಂದಿನ ಉದ್ದೇಶ ಹಾಗೂ ಇದರಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆಯೂ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ: ನಾಳೆ (ಜುಲೈ 24) ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ (ಜುಲೈ 24) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ, ಐಟಿಐಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಕಾಲೇಜಿಗೆ ರಜೆ ಘೋಷಿಸಿರುವುದಿಲ್ಲ.

© all rights reserved
made with by templateszoo