ಉಡುಪಿ

ಉಡುಪಿ, udupi

ಮಂಗಳೂರು

ಮಂಗಳೂರು, mangaluru, mangalore

ರಾಜ್ಯ

ರಾಜ್ಯ

Breaking

Videos

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ| ಮುಂದಿನ ೬ ದಿನಗಳ‌ ಕಾಲ ಭಾರೀ ಮಳೆ ಸಾಧ್ಯತೆ| ವಿವಿಧ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

 


ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ(ಮೇ 19) ಸತತವಾಗಿ ಆರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ಬೀಸಲಿದ್ದು, ಬಹುತೇಕ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.

ಮೇ 19ರಂದು ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಹಾಸನ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 20ರಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 21ರಿಂದ 24ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉಡುಪಿ ಎಸ್ಪಿ ಸಹಿತ ನಾಲ್ವರು ಪೊಲೀಸರಿಗೆ ‘ಡಿಜಿ – ಐಜಿಪಿ ಪ್ರಶಂಸಾ ಪದಕ’

ಉಡುಪಿ, ಮೇ 18: ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ ‘ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ’ 2024-25ನೇ ಸಾಲಿನ ಪ್ರಶಸ್ತಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಸೇರಿದಂತೆ ಜಿಲ್ಲೆಯ ನಾಲ್ವರು ಪೊಲೀಸರು ಭಾಜನರಾಗಿದ್ದಾರೆ.

ಮಲ್ಪೆ ಕರಾವಳಿ ಕಾವಲು ಪೊಲೀಸ್‌ನ ಎಸ್ಸೈ ವೈಲೆಟ್ ಫೆಮಿನಾ, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಗುರುದಾಸ್, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಲ್ಪೆ - ಆದಿ ಉಡುಪಿ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

 


ಮಲ್ಪೆ ಆದಿ ಉಡುಪಿ ಹೆದ್ದಾರಿ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಲ್ಪೆ ಫಿಶರೀಶ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಮನವಿಯ ಮೇರೆಗೆ ಹೆದ್ದಾರಿ ಕಾಮಗಾರಿಗಾಗಿ ತೆರವು ಮಾಡಿರುವ ಶಾಲೆಯ ಆವರಣ ಗೋಡೆಯನ್ನು ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಮರು ನಿರ್ಮಾಣ ಮಾಡುವಂತೆ ರಾಷ್ಟೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲ್ಪೆ ಎಳೂರು ಮೊಗವೀರ ಭವನದ ಬಳಿ ಈ ಹಿಂದೆ ಗಣೇಶೋತ್ಸವ ಸಮಿತಿಯ ವತಿಯಿಂದ ನಿರ್ಮಿಸಿದ್ದ ಬಸ್ಸು ನಿಲ್ದಾಣವನ್ನು ತೆರವು ಮಾಡಿದ್ದು, ಈಗ ಯಾವುದೇ ಬಸ್ ನಿಲ್ದಾಣವಿಲ್ಲದೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಬಿಸಿಲು ಗಾಳಿ ಮಳೆಗೆ ರಕ್ಷಣೆ ಇಲ್ಲದೆ ತೊಂದರೆ ಎದುರಿಸುತ್ತಿದ್ದು, ಬಾಕಿ ಉಳಿದಿರುವ ಮರವನ್ನು ತೆರವು ಮಾಡಿ ತಾತ್ಕಾಲಿಕ ಬಸ್ಸು ನಿಲ್ದಾಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮುಂದಿನ ಹಂತದಲ್ಲಿ ಕಟ್ಟಡಗಳ ತೆರವು ಸಂದರ್ಭದಲ್ಲಿ ಕಟ್ಟಡಗಳ ಮಾಲೀಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಹಾಗೂ ಸಾರ್ವಜನಿಕರು ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಹಕಾರ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ ಸುಂದರ ಕಲ್ಮಾಡಿ, ಶ್ರೀಮತಿ ಎಡ್ಲಿನ್ ಕರ್ಕಡ, ಶ್ರೀ ಶ್ರೀಶ ಕೊಡವೂರು, ಶ್ರೀಮತಿ ಲಕ್ಷ್ಮೀ ಮಂಜುನಾಥ, ರಾಷ್ಟೀಯ ಹೆದ್ದಾರಿ ಇಲಾಖೆಯ ಶ್ರೀ ಮಂಜುನಾಥ ನಾಯಕ್, ಗ್ರಾಮ ಆಡಳಿತಾಧಿಕಾರಿ ಶ್ರೀ ಕಾರ್ತಿಕೇಯ ಭಟ್, ಸ್ಥಳೀಯ ಮುಖಂಡರಾದ ಶ್ರೀ ಮಂಜು ಕೊಳ, ಶ್ರೀ ಸುರೇಶ್ ಕುಂದರ್, ಫೀಶರೀಶ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.





ಉಡುಪಿ: ಗಿರಿಜಾ ಸರ್ಜಿಕಲ್ಸ್ ವತಿಯಿಂದ ನರ್ಸಸ್ ಡೇ ಆಚರಣೆ


 ಉಡುಪಿ ಜಿಲ್ಲೆಯಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ದಾದಿಯರ (ನರ್ಸಸ್) ಹೆಮ್ಮೆಯ ಸೇವೆಯನ್ನು ಗುರುತಿಸಿ, ಅವರ ಪ್ರಯತ್ನಗಳಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಗಿರಿಜಾ ಸರ್ಜಿಕಲ್ಸ್ ಹಾಗೂ ಸೀನಿಯರ್ ಜೆಸಿಐ, ಟೆಂಪಲ್ ಸಿಟಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸಲಾಯಿತು.

ಕಾರ್ಯಕ್ರಮವು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ್ದು, ನರ್ಸಿಂಗ್ ವೃತ್ತಿಯ ಮಹತ್ವ, ದಾದಿಯರ ತ್ಯಾಗಮಯ ಜೀವನ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವರ ಪಾತ್ರವನ್ನು ವಿಶೇಷವಾಗಿ ಪ್ರತಿಪಾದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸರ್ಜನ್ ಡಾ. ಅಶೋಕ್, ಆಸ್ಪತ್ರೆಯ RMO ಡಾ. ವಾಸುದೇವ, ಸೀನಿಯರ್ ಜೆಸಿಐ ಅಧ್ಯಕ್ಷ ಶ್ರೀ ಶಿವಾನಂದ ಶೆಟ್ಟಿಗಾರ್, ಹಾಗೂ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಶೆಟ್ಟಿ ಕಡೆಕಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದಾದಿಯರಿಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಮಾತನಾಡಿದರು.

ಹಿರಿಯ ಐದು ಮಂದಿ ದಾದಿಯರನ್ನು ವಿಶೇಷವಾಗಿ ಸನ್ಮಾನಿಸಲಾಗಿದ್ದು, ಉಳಿದ ಎಲ್ಲಾ ನರ್ಸಿಂಗ್ ಸಿಬ್ಬಂದಿಯ ಸೇವೆಗೂ ಗೌರವಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು. ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ರತ್ನವತಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

ಇದೇ ಸಂದರ್ಭದಲ್ಲಿ ಸೀನಿಯರ್ ಜೆಸಿಐ ಸದಸ್ಯರು, ಗಿರಿಜಾ ಸರ್ಜಿಕಲ್ಸ್ ನ ಸಿಬ್ಬಂದಿ ವರ್ಗ, ಹಾಗೂ ಹಲವಾರು ಆರೋಗ್ಯ ಸೇವಾ ತಜ್ಞರು ಹಾಜರಿದ್ದರು.

ಗಿರಿಜಾ ಸರ್ಜಿಕಲ್ಸ್ ಸಂಸ್ಥೆಯು ಉಡುಪಿಯ ಹೊರತಾಗಿಯೂ ಕುಂದಾಪುರ ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಕೂಡ ನರ್ಸಸ್ ಡೇ ಕಾರ್ಯಕ್ರಮಗಳನ್ನು ಆಯೋಜಿಸಿ, ಸ್ಥಳೀಯ ದಾದಿಯರ ಸೇವೆಗೆ ಗೌರವ ಸಲ್ಲಿಸಿದೆ.

ಈ ಪ್ರಯತ್ನವು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ನರ್ಸಿಂಗ್ ವೃತ್ತಿಗೆ ಹೆಚ್ಚಿನ ಮಾನ್ಯತೆ ನೀಡುವತ್ತ ಗಮನ ಸೆಳೆಯುತ್ತಿದೆ.








ಉಡುಪಿ: ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿಯಿಟ್ಟ ವ್ಯಕ್ತಿ..!

 


ಉಡುಪಿ,ಮೇ.11: ಅತಿಮಧ್ಯ ಸೇವನೆಯಿಂದ ಅಮಲೇರಿದ ಕುಡುಕನೊಬ್ಬ, ತ‌ನ್ನದೆ ಮನೆಗೆ ಬೆಂಕಿ‌ ಹಿಡಿಸಿರುವ ಘಟನೆಯು, ನಗರದ ಹೊರವಲಯದ ಚಿಟ್ಪಾಡಿಯಲ್ಲಿ ರವಿವಾರ ನಡೆದಿದೆ.

ಕುಡುಕನ ರಂಪಾಟ, ಉಗ್ರ ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಹೇಳಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಒಳಕಾಡುವರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಒಳಕಾಡುವರು ಕುಡುಕನ‌‌ ಮೊನವೊಲಿಸಿ ಮಧ್ಯವರ್ಜನ‌ ಕೇಂದ್ರಕ್ಕೆ ದಾಖಲುಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ

 

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಇತ್ತೀಚಿಗೆ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸುದ್ದಿ ಇನ್ನು ಅಭಿಮಾನಿಗಳ ಮನದಲ್ಲಿ ಹಸಿರಾಗಿರುವಾಗಲೇ, ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈ ಸುದ್ದಿ ಅಭಿಮಾನಿಗಳಿಗೆ ತೀವ್ರ ಆಘಾತವನ್ನು ಉಂಟು ಮಾಡಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸಹ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.

ಇತ್ತೀಚಿಗೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿವರತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು. ಅಲ್ಲದೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಐಪಿಎಲ್‌ ನಡೆಯುತ್ತಿರುವಾಗಲೇ ರೋಹಿತ್ ಶರ್ಮಾ ಅವರ ಈ ನಿರ್ಧಾರ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಭಾರತ ಇಂಗ್ಲೆಂಡ್‌ ಪ್ರವಾಸವನ್ನು ಆರಂಭಿಸುವ ಮುನ್ನ ರೋಹಿತ್‌ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈಗ ವಿರಾಟ್‌ ಸಹ ಇದೇ ಹಾದಿ ತುಳಿದಂತೆ ಕಾಣುತ್ತಿದೆ.

ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲ
ವರದಿಗಳ ಅನುಸಾರ ಇಂಗ್ಲೆಂಡ್‌ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ತಂಡವನ್ನು ಪ್ರಕಟಿಸಬೇಕಾಗುತ್ತದೆ. ಇದೇ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂತಹ ಅನುಭವಿ ಆಟಗಾರರು ತಂಡಕ್ಕೆ ಅಲಭ್ಯರಾದಲ್ಲಿ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಟೀಕೆಗೆ ಗುರಿಯಾಗಿದ್ದರು. ಆಗಿನಿಂದಲೂ ವಿರಾಟ್‌ ಇತಂಹದೊಂದು ನಿರ್ಧಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿರಾಟ್‌ ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ 123 ಟೆಸ್ಟ್‌ ಪಂದ್ಯಗಳಲ್ಲಿ 9230 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 46 ಆಗಿದೆ. ಒಟ್ಟಾರೆ ವಿರಾಟ್‌ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.


ಉಡುಪಿ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ


ಉಡುಪಿ: ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ.

ಕಾಮಿಡಿ ಕಿಲಾಡಿಗಳು ಸೀಸನ್ 3ಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮನರಂಜನೆ ನೀಡುತ್ತಿದ್ದ ಜನಪ್ರಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಘಾತರಿಂದ ನಿಧನರಾಗಿದ್ದಾರೆ.

ರಾಕೇಶ್ ಪೂಜಾರಿ ಅವರು ಉಡುಪಿ ನಿವಾಸಿಯಾಗಿದ್ದರು. ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟ ರಾಕೇಶ್ ಪೂಜಾರಿ ಈಗ ಹಿಟ್ಲರ್ ಕಲ್ಯಾಣ ಸೇರಿದಂತೆ ಸಿನಿಮಾಗಳು, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ-ಪಾಕ್ ಉದ್ವಿಗ್ನತೆ: ಯಕ್ಷಗಾನದಲ್ಲೂ ಪ್ರತಿಧ್ವನಿಸಿದ 'ಆಪರೇಷನ್ ಸಿಂಧೂರ'!

 


ಉಡುಪಿ, ಮೇ ೯: ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನ ಕೇವಲ ಪುರಾಣ ಕಥೆಗಳಿಗೆ ಸೀಮಿತವಾಗದೆ ಸಮಕಾಲೀನ ವಿಷಯಗಳಿಗೂ ಸ್ಪಂದಿಸುತ್ತಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನ ಪರಿಸ್ಥಿತಿ ಹಾಗೂ ಭಾರತವು ನಡೆಸಿದ 'ಆಪರೇಷನ್ ಸಿಂಧೂರ'ದ ಕುರಿತಾದ ಸಂಭಾಷಣೆಯೊಂದು ಯಕ್ಷಗಾನದ ರಂಗಸ್ಥಳದಲ್ಲಿ ಕೇಳಿಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾವಂಜೆ ಮೇಳದ ಕಲಾವಿದ ದಿನೇಶ್ ಶೆಟ್ಟಿ ಅವರು ಆಪರೇಷನ್ ಸಿಂಧೂರದ ಕುರಿತು ಮಾತನಾಡುತ್ತಿರುವ ವಿಡಿಯೋವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಿನೇಶ್ ಶೆಟ್ಟಿ ಅವರು, "ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವನು. ಪವಿತ್ರವಾದ ಸಂಸ್ಕಾರವನ್ನು ಪಡೆದವನು. ಈ ನೆಲವನ್ನು ನಾವು ತಾಯಿಯೆಂದು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಬಿಟ್ಟರೆ ನಮಗೆ ಬೇರೊಂದಿಲ್ಲ. ಹೀಗಾಗಿ ನಮಗೆ ದೇಶಪ್ರೇಮವನ್ನು ಕಲಿಸಿದೆ, ದೇಶದ್ರೋಹ ಮಾಡುವುದನ್ನಲ್ಲ" ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ತ್ರೀ ವೇಷಧಾರಿಯೊಬ್ಬರು, "ಈ ತಾಯಿಯ ಸಿಂಧೂರ ಅಳಿಸಲು ಬಂದರೆ ಏನು ಮಾಡೋದು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ದಿನೇಶ್ ಶೆಟ್ಟಿ ಅವರು, "ತಾಯಿಯ ಸಿಂಧೂರವನ್ನು ಒರೆಸುತ್ತೇನೆಂದು ಬಂದರೆ, ಈ ನೆಲದ ಒಬ್ಬಳು ಹೆಣ್ಣಿನ ಸಿಂಧೂರ ಒರೆಸಿದರೆ ವೈರಿಗಳ ಸಾವಿರಾರು ಮಡದಿಯಂದಿರ ಸಿಂಧೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ" ಎಂದು ದಿಟ್ಟ ಉತ್ತರ ನೀಡಿದ್ದಾರೆ.

ಕಲಾವಿದರ ಈ ದೇಶಭಕ್ತಿಪೂರಿತ ಮಾತುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಯಕ್ಷಗಾನದಂತಹ ಕಲೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಪ್ರಸ್ತುತ ವಿದ್ಯಮಾನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.



ದೇಶದಾದ್ಯಂತ ಹೈಅಲರ್ಟ್: 24 ಏರ್ಪೋರ್ಟ್‌ಗಳು ತಾತ್ಕಾಲಿಕ ಸ್ಥಗಿತ


ನವದೆಹಲಿ: ಪಾಕಿಸ್ತಾನ ಕ್ಷಪಣಿ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದೇಶಾದ್ಯಂತ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣದ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಮಾಡಿಕೊಳ್ಳುವಂತೆ ತಿಳಿಸಿವೆ.

ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.

ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನಯಾನದ ಬಗ್ಗೆ ಮಾಹಿತಿ ತಿಳಿದುಕೊಂಡು ಏರ್‌ಪೋರ್ಟ್‌ಗೆ ಬರಲು ಸೂಚಿಸಲಾಗಿದೆ.


ಉಡುಪಿ : ಗ್ರಾ.ಪಂ. ಅಧ್ಯಕ್ಷರ ಆಯ್ಕೆ : ಚುನಾವಣಾಧಿಕಾರಿಗಳ ನೇಮಕ…!!


ಉಡುಪಿ: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್‌ನ
ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನವನ್ನು (ಮೀಸಲಾತಿ – ಸಾಮಾನ್ಯ) ಆಯ್ಕೆ ಮಾಡುವ ಸಲುವಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್ ಅವರನ್ನು ಗೊತ್ತು ಪಡಿಸಿದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು,

ಸದ್ರಿರವರು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 45 ಹಾಗೂ (ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ) ನಿಯಮಗಳು 1995 ರ ನಿಯಮ 4 ರಿಂದ 11ರವರೆಗಿನ ನಿಯಮದಂತೆ ಚುನಾವಣೆ ನಡೆಸಿ, ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರೇಷನ್ ಸಿಂಧೂರ ಮೂಲಕ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೂ ನ್ಯಾಯ ಒದಗಿಸಿದ ನರೇಂದ್ರ ಮೋದಿ ಸರ್ಕಾರ: ಯಶ್ಪಾಲ್ ಸುವರ್ಣ


ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ'ದ ಮೂಲಕ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಲಷ್ಕರೆ ತೊಯ್ಬಾ ಮತ್ತು ಜೈಶೆ ಮೊಹಮ್ಮದ್ ಸಂಘಟನೆಗಳ 9 ನೆಲೆಗಳನ್ನು ಧ್ವಂಸಗೊಳಿಸಿ, ನೂರಾರು ಮತಾಂಧ ಉಗ್ರರ ಮಾರಣಹೋಮ ನಡೆಸಿ ಉಗ್ರವಾದವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂಬ ದಿಟ್ಟ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನ್ಯಾಯ ಒದಗಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

26 ಅಮಾಯಕರನ್ನು ಬಲಿಪಡೆದ ಉಗ್ರರರನ್ನು ಪಾಕಿಸ್ತಾನದ ಒಳಗಡೆ ಹೋಗಿ ಭಾರತೀಯ ಸೇನೆ ಹೊಡೆದುರುಳಿಸಿದೆ. ಯುದ್ಧದ ಉದ್ವಿಗ್ನತೆ ನಡುವೆಯೇ ಪಾಕ್‌ ವಿರುದ್ಧ ಭಾರತ ಸೇಡನ್ನು ತೀರಿಸಿಕೊಂಡಿದ್ದು, ‌ಪಾಕ್‌ ಹಾಗೂ ಪಿಒಕೆಯ 9 ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿರುವ ಭಾರತ ಉಗ್ರರ ಹುಟ್ಟಡಗಿಸಿ ಪಹಲ್ಗಾಮ್‌ ದಾಳಿಗೆ ಆಪರೇಷನ್‌ ಸಿಂಧೂರ ಮೂಲಕ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿದೆ.

ಭಾರತೀಯ ಹಿಂದೂ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರ ‘ಆಪರೇಷನ್‌ ಸಿಂಧೂರ’ ಎಂದು ಕಾರ್ಯಾಚರಣೆಗೆ ನಾಮಕರಣ ಮಾಡಿ ಅತ್ಯಂತ ಯಶಸ್ವಿಯಾಗಿ ಅತ್ಯಂತ ಕ್ಷಿಪ್ರ ಹಾಗೂ ಪರಾಕ್ರಮ ಮೆರೆದು ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಿದ ಭಾರತೀಯ ಸೇನೆಯ ರಕ್ಷಣಾ ಸಲಹೆಗಾರರಾದ ಶ್ರೀ ಅಜಿತ್ ಧೋವಲ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪರಾಕ್ರಮ ಮೆರೆದ ವೀರ ಸೈನಿಕರಿಗೆ ದೇಶದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದೇಶದ ಜನತೆ ನರೇಂದ್ರ ಮೋದಿ ಸರ್ಕಾರದ ಮೇಲೆ ಭರವಸೆ ಇಟ್ಟು ಮತದಾನ ಮಾಡಿದ ಪ್ರತಿಯೋರ್ವ ಭಾರತೀಯನ ಮತಕ್ಕೆ ಇಂದು ಗೌರವ ಸಲ್ಲಿಸುವ ಕೆಲಸವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ, ಗೃಹ ಸಚಿವ ಶ್ರೀ ಅಮಿತ್ ಶಾ, ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಹಾಗೂ ಸಚಿವ ಸಂಪುಟದ ಸಚಿವರು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


© all rights reserved
made with by templateszoo